Translate in your Language

Saturday, October 10, 2015

ಶಿವರಾಮ ಕಾರಂತ ಅವರ 114 ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ


ಕಾರಂತರು ಹುಟ್ಟಿದ್ದು ೧೯೦೨ ರ ಅಕ್ಟೋಬರ್ ೧೦ನೇ ತಾರೀಖಿನಂದು ಸಾಲಿಗ್ರಾಮದಲ್ಲಿ ಜನಿಸಿದರು

ಕಾರಂತರು ಮಾಡಿದ ಕೆಲಸ, ಬರೆದ ಬರಹಗಳನ್ನು ನೋಡಿದರೆ, ಒಬ್ಬರೇ ವ್ಯಕ್ತಿ, ಒಂದೇ ಜೀವನದಲ್ಲಿ ಇಷ್ಟೆಲ್ಲ ಮಾಡಲು ಸಾಧ್ಯವೆ ಎಂದು ಬೆರಗುಪಡುವಂತಾಗುತ್ತದೆ.  ಸಮಯದ ಅಭಾವದ ಬಗ್ಗೆ ನಾವೆಲ್ಲ ಗೊಣಗುಟ್ಟುವ ಪರಿಯ ಬಗ್ಗೆ ಡಾ. ಕೋಟ ಶಿವರಾಮ ಕಾರಂತರು ಹೇಳುತ್ತಾರೆ,.  “....ನಾನು ಸಮಯದ ಅಭಾವವನ್ನು ಕುರಿತು ಎಂದೂ ನೆಪ ಹೇಳಿದವನಲ್ಲ.  ಪ್ರತಿದಿನ ರಾತ್ರಿ ನಾನು ಒಂಭತ್ತು ತಾಸುಗಳ ನಿದ್ದೆ ಸಾಲದೆ ಹಗಲು ಸಹ ಒಂದು ತಾಸು ನಿದ್ದೆ ಮಾಡುತ್ತೇನೆ.  ಅಥವಾ ಮನಸ್ಸು ಬಂದರೆ ಇನ್ನೂ ತುಸು ಹೆಚ್ಚಾಗಿ ನಿದ್ದೆ ಮಾಡುವಷ್ಟು ಅವಕಾಶವಿದೆ ಎಂದು ತಿಳಿದಿದ್ದೇನೆ.  ಸಮಯ ಸಾಲದೆಯೆ ನನ್ನ ಯಾವ ಕೆಲಸವೂ ಈ ತನಕ ಕೆಟ್ಟದ್ದು ಕಾಣಿಸುವುದಿಲ್ಲ.  ನನಗಿರುವ ಕಷ್ಟ – ಕೈಯಲ್ಲಿ ಒಂದಲ್ಲ ಒಂದು ಕೆಲಸವಿಲ್ಲದಿದ್ದರೆ ಸಮಯ ಕಳೆಯುವುದು ಹೇಗೆ ಎಂಬ ಚಿಂತೆ!  ಇಂಥದೇ ನಿಶ್ಚಿತ ಕೆಲಸವನ್ನು ಮಾಡಬೇಕು ಎಂದು ಮನಸ್ಸಿಗೆ ಹೊಳೆಯದೆ ಹೋಯಿತಾದರೆ ಒಂದಲ್ಲ ಒಂದು ಪುಸ್ತಕವನ್ನು ತೆರೆದು ಓದಲು ಎತ್ತಿಕೊಳ್ಳುತ್ತೇನೆ.  ಅದಕ್ಕಾಗಿ ಆಗಾಗ ಒಳ್ಳೆಯ ಪುಸ್ತಕ ತರಿಸಿಕೊಳ್ಳುತ್ತೇನೆ.  ಅದಕ್ಕೆ ವಿಷಯಗಳ ಗೊತ್ತು ಗುರಿಯಿಲ್ಲ.  ಹಾಗೆ ತರಿಸಿಕೊಂಡು ಓದಿದ ಪುಸ್ತಕಗಳಲ್ಲಿ ಕೆಲವು ರುಚಿಸುತ್ತವೆ.  ಕೆಲವು ರುಚಿಸುವುದಿಲ್ಲ.  ಒಳ್ಳೆಯ ಪುಸ್ತಕಗಳು ಕೈಗೆ ಸಿಕ್ಕಿದರೆ – ಆಗ ಬೇರೊಂದೇ ಚಿಂತನೆ ಮೂಡುತ್ತದೆ. 


 ಮಾಡಬಹುದಾದ ಕೆಲಸಗಳು ವಿಪುಲವಾಗಿವೆ.  ಸಮಯವೂ ಧಾರಾಳವಾಗಿದೆ.  ಬದುಕಿಗೂ, ಮಾನವೀಯ ಚಟುವಟಿಕೆಗಳಿಗೂ ನಿಕಟ ಸಂಬಂಧವಿದೆ ಎಂಬುದು ನನ್ನ ತಿಳಿವು.  ನಾವು ಬದುಕಿದ್ದೇವೆ – ಎಂದು ಅನಿಸಿಕೊಳ್ಳುವುದಕ್ಕಾದರೂ ನಮಗೆ ಒಂದಲ್ಲ ಒಂದು ಚಟುವಟಿಕೆ ಬೇಕೇ ಆಗುತ್ತದೆ.  ಆ ಚಟುವಟಿಕೆಯೇ ನಮ್ಮ ಮನಸ್ಸಿನ ಅಭಿರುಚಿಗೆ ಒಗ್ಗಿದ ಒಂದು ಕೆಲಸ ಅನಿಸಿದರಾಯಿತು” (ಸ್ಮೃತಿ ಪಟಲದಿಂದ, ಸಂಪುಟ ೨)

ಕಾರಂತರು ತಾವು ಬದುಕಿದ 95ವರ್ಷಗಳಲ್ಲಿ ನಿರಂತರವಾಗಿ ನವ ಯುವಕರಂತೆ ಊರೂರು ಅಲೆದು, ಜನಸಮುದಾಯದಲ್ಲಿ ಬೆರೆತು, ತಾವು ಬದುಕಿನಲ್ಲಿ ಕಂಡುಕೊಂಡ ದರ್ಶನಗಳನ್ನು ಹಂಚಿಕೊಳ್ಳುತ್ತ, ಕೇಳುಗರಿಗೆ ಮಹಾನ್ ಪುರುಷರ ವ್ಯಾಖ್ಯೆಗಳನ್ನು ಕೇಳುತ್ತಿರುವ ಅನುಭವವಾಗುತ್ತಿರುವಷ್ಟರಲ್ಲೇ, ನಾನಿನ್ನೂ ಬದುಕಿನ ವಿದ್ಯಾರ್ಥಿ ಎಂದು ವಿನೀತಭಾವ ತೋರ್ಪಡಿಸಿ ಈ ಬ್ರಹ್ಮಾಂಡದ ಅಖಂಡತೆಯಲ್ಲಿ ಮತ್ತೊಮ್ಮೆ ಕಾರ್ಯಪ್ರವೃತ್ತರಾಗುತ್ತಿದ್ದರು.

ಡಾ. ಶಿವರಾಮ ಕಾರಂತರು ಮಂಗಳೂರಿಗೆ 50 ಮೈಲಿ ದೂರದ ಕೋಟ ಎಂಬ ಚಿಕ್ಕ ಗ್ರಾಮದಲ್ಲಿ 1902ರ ಅಕ್ಟೋಬರ್ 10ರಂದು ಜನಿಸಿದರು.  ಅವರ ತಂದೆ  ಕೆ. ಶೇಷ ಕಾರಂತರು.  ತಾಯಿ ಲಕ್ಷ್ಮಿ.  ಕಾರಂತರು ತಮ್ಮ ಪ್ರೌಢ ಶಿಕ್ಷಣವನ್ನು ಕೋಟ ಮತ್ತು ಕುಂದಾಪುರಗಳಲ್ಲಿ ಪಡೆದರು.  ಚಿಕ್ಕಂದಿನಲ್ಲೇ ಅವರಿಗೆ ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತಿ ಹುಟ್ಟಿತು.

ಕಾರಂತರು ಶಾಲೆಯಲ್ಲಿ ಕುಳಿತು ಕಲಿತದ್ದಕ್ಕಿಂತ ನಿಸರ್ಗದಲ್ಲಿ ವಿಹರಿಸಿ ಬದುಕಿನ ಶಾಲೆಗಳಲ್ಲಿ ಕಲಿತಿದ್ದೆ ಹೆಚ್ಚು.  ಅವರದೇ ಪರಿಯಲ್ಲಿ ಹೇಳುವುದಾದರೆ ಮುಂಜಾನೆಯ ಹಕ್ಕಿಗಳ ಉಲಿತ, ಹರಳುಗಲ್ಲಿನ ಮೇಲೆ ಓಡುವ ನದಿಯೊಂದರ ನಾದ, ಸಂಜೆಯ ಗಾಳಿಗೆ ಮಿದುವಾಗಿ ಉರುಳುವ ಕಡಲಿನ ಮೊರೆತ, ಅಲೆಗಳು ಮರಳ ದಿನ್ನೆಯನ್ನೇರಿ ತಿರುಗಿ ಕಡಲನ್ನು ಸೇರುವ ಜೋಗುಳ, ನೀಲ ಬಾನಿನ ಚುಕ್ಕಿಗಳ ವಿಸ್ತಾರ ರಾಜ್ಯ, ಹಸಿರು ಕಾನನ ಇವುಗಳೆಲ್ಲ ಅವರಿಗೆ ಪಾಠಕ್ಕಿಂತ ಹೆಚ್ಚು ಪ್ರಿಯ.

ಜೀವನದ ಸಹಸ್ರಾರು ಸಮಸ್ಯೆಗಳಿಗೆ ಸದಾ ತೆರೆದ ಮನಸ್ಸು, ಕುಂದದ ಕುತೂಹಲ ಮತ್ತು ನಿರಂತರ ಸಾಧನೆಯ ಛಲ, ಎಲ್ಲವನ್ನೂ ಪರೀಕ್ಷಿಸಿದ ನಂತರವೇ ಸ್ವೀಕರಿಸುವ ಅಥವಾ ನಿರಾಕರಿಸುವ ಸ್ವಭಾವ ಇವೆಲ್ಲವನ್ನೂ ಕಾರಂತರು  ಪ್ರಾರಂಭದಿಂದಲೇ ಮೈಗೂಡಿಸಿಕೊಂಡರು.  ತಮಗನ್ನಿಸಿದ್ದನ್ನು ಕೈಗೊಳ್ಳಲು ಅವರು ಹಿಂದೆ ಮುಂದೆ ನೋಡಿದವರಲ್ಲ.  ಗಾಂಧೀಜಿಯವರ ಅಸಹಕಾರ ಚಳುವಳಿಯ ಕರೆಯ ಬಗ್ಗೆ ಪತ್ರಿಕೆಯಲ್ಲಿ ಓದಿ ಆ ಕ್ಷಣದಲ್ಲೇ ತಮ್ಮ ಶಾಲಾ ಪ್ರಿನ್ಸಿಪಾಲರಿಗೆ, “I want to non-co-operate with your education system” ಎಂದು ಚೀಟಿ ನೀಡಿ ಹೊರಬಂದರು.  ಇದೇನು, ಆ ಹುಡುಗ ಲೀವ್ ಲೆಟರ್ ಇಟ್ಟಂತೆ ಈ ಪತ್ರವನ್ನಿಟ್ಟು ಹೋಗುತ್ತಿದ್ದಾನಲ್ಲ, ಅವನನ್ನು ಕರೆಯಿರಿ ಎಂದು ಹೇಳುವಷ್ಟರಲ್ಲಿ ಇವರು ಹಿಂದಿರುಗಿ ನೋಡದೆ ಹೊರಟುಬಿಟ್ಟಿದ್ದರು.  ಸ್ವಾತ್ರಂತ್ರ್ಯ ಸಂಗ್ರಾಮದಲ್ಲಿ ಧುಮುಕಿದ ಇವರು ಗಾಂಧೀವಾದದಲ್ಲಿ ಪ್ರಭಾವಿತರಾಗಿ ಸಾಕಷ್ಟು ಕಾಲ ಸವೆಸಿದರೂ ಅದಕ್ಕೇ ಜೋತುಬೀಳದೆ ಬದುಕಿನ ವೈವಿಧ್ಯತೆಯೆಡೆಗೆ ದೃಷ್ಟಿ ಹಾಯಿಸಿದರು.

ತಮ್ಮ ಬದುಕಿಗೆ ಯಾವುದೇ ಸೀಮಿತ ಪರಿಧಿಗಳನ್ನು ವಿಧಿಸಿಕೊಳ್ಳಲು ಬಯಸದ ಕಾರಂತರಿಗೆ ಜ್ಞಾನದ ಎಲ್ಲ ಶಾಖೆಗಳೂ ಹತ್ತಿರವಾಗಿ ಕಂಡವು.  ಸಾಹಿತ್ಯ ರಚನೆ, ನಾಡ ಹಬ್ಬ, ಶಿಕ್ಷಕರ ಸಮ್ಮೇಳನ ಮುಂತಾದ ಚಟುವಟಿಕೆಗಳನ್ನು ಅವರು ಪುತ್ತೂರಿನಲ್ಲಿ ಪ್ರಾರಂಭಿಸಿದರು.  ಕಾರಂತರಂತೆ ಸಾಹಿತ್ಯ, ರಂಗಭೂಮಿ, ಚಲನಚಿತ್ರ, ವಿಜ್ಞಾನ, ಚಿತ್ರಕಲೆ, ಸಂಗೀತ, ಶಿಕ್ಷಣ, ರಾಜಕೀಯ, ಪತ್ರಿಕೋದ್ಯಮ, ಭಾಷೆ, ಸಂಸ್ಕೃತಿ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಕ್ರಿಯಾಶೀಲರಾದ ಬರಹಗಾರರು ಇಲ್ಲವೇ ಇಲ್ಲ ಎನ್ನಬೇಕು.  ಅವರು ಮಾಡಿದ “ಬಾಲ ಪ್ರಪಂಚ”, “ವಿಜ್ಞಾನ ಪ್ರಪಂಚ” ಯೋಜನೆಗಳು ವಿಶ್ವ ವಿದ್ಯಾಲಯಗಳಿಗೆ ಮಾತ್ರ ಸಾಧ್ಯವಿರುವಂತದ್ದು.  ಇಂತಹದ್ದನ್ನು ಒಬ್ಬರೇ ಕೈಗೊಂಡು ಸಾಧಿಸಿದರು.  ಸಿರಿಗನ್ನಡ ಅರ್ಥಕೊಶವನ್ನು ತಯಾರಿಸಿದರು.  ಯಕ್ಷಗಾನ ಕುರಿತ ಪುಸ್ತಕಗಳನ್ನು ಬರೆದರು.  ಸ್ವತಃ ಹಲವು ಪ್ರಯೋಗಗಳನ್ನು ನಡೆಸಿದರು.  ಶಿಲ್ಪಕಲೆ, ಚಿತ್ರಕಲೆಗಳ ಕುರಿತಾದ ಪುಸ್ತಕಗಳನ್ನು ಬರೆದರು.  ಸ್ವತಃ ಚಿತ್ರರಚನೆಯನ್ನೂ ಮಾಡಿದರು.  ಚಲನಚಿತ್ರ ನಿರ್ಮಿಸಿದರು, ನಿರ್ದೇಶಿಸಿದರು.  ನಾಟಕ, ಯಕ್ಷಗಾನಗಳಲ್ಲಿ ನಟಿಸಿದರು.  ನಲವತ್ತಕ್ಕೂ ಹೆಚ್ಚು ಕಾದಂಬರಿಗಳನ್ನೂ, ಹಲವಾರು ಪ್ರವಾಸ ಕಥನಗಳನ್ನೂ, ಆತ್ಮ ಚರಿತ್ರೆಯನ್ನೂ ಬರೆದರು.  ಐ.ಬಿ.ಎಚ್ ಪ್ರಕಾಶನ ಮಕ್ಕಳಿಗಾಗಿ ಪ್ರಕಟಿಸಿದ ಅಮರ ಚಿತ್ರಕಥೆಗಳನ್ನು ಅನುವಾದಿಸಿದರು.  ಮಕ್ಕಳ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ವಿಫುಲವಾದ ಪ್ರಯೋಗಗಳನ್ನು ನಡೆಸಿದರು.  ಚುನಾವಣೆಗಳಲ್ಲಿ ಸ್ಪರ್ಧಿಸುವುದೂ ಸೇರಿದಂತೆ ಭಾರತದ ರಾಜಕೀಯದಲ್ಲಿ ಕ್ರಿಯಾಶೀಲ ಸಂಬಂಧವನ್ನು ತೋರಿದರು.  ‘ ಪ್ರಾಣಿ ಪ್ರಪಂಚದ ವಿಸ್ಮಯಗಳು’ ಅವರು 90 ವರ್ಷದ ಸಮೀಪದಲ್ಲಿದ್ದಾಗ ಪ್ರಕಟವಾದ ಕೃತಿ.  ಒಂದು ಕಾಲದಲ್ಲಿ ಅವರು ತಮ್ಮ ಪುಸ್ತಕಗಳಿಗೆ ತಾವೇ ಪ್ರಕಾಶಕರೂ, ವಿನ್ಯಾಸಕರೂ, ಮುದ್ರಕರೂ, ಮಾರಾಟಗಾರರೂ ಆಗಿದ್ದರು.  “ಕೆಲವೊಂದಕ್ಕೆ ನಾನೇ ಓದುಗನೂ ಆಗಿದ್ದೆ” ಎಂದು ತಮ್ಮನ್ನೇ ತಾವು ಹಾಸ್ಯ ಮಾಡಿಕೊಳ್ಳುತ್ತಿದ್ದರು.

ಕಾರಂತರಿಗೆ ಅವರ ಬದುಕು ಬೇರೆಯಲ್ಲ, ಬರವಣಿಗೆ ಬೇರೆಯಲ್ಲ.  ಅವರು ಪರಿಸರ ಮಾಲಿನ್ಯದ ಬಗ್ಗೆಯಾಗಲೀ, ಪ್ರಾಕೃತಿಕ ಸಮತೋಲನದ ಬಗ್ಗೆಯಾಗಲೀ, ಪಾಂಡಿತ್ಯಪೂರ್ಣವಾಗಿ ಬರೆಯುವಷ್ಟೇ ಖಾಳಜಿಯಿಂದ ಅವುಗಳನ್ನು ಕುರಿತ ಚಟುವಟಿಕೆಗಳ ಜವಾಬ್ದಾರಿಯನ್ನೂ ವಹಿಸುತ್ತಿದ್ದರು.  ಸಂಗೀತ, ಚಿತ್ರ, ನಟನೆ, ಪ್ರವಾಸ ಯಾವುದೇ ಆಗಲಿ ಸ್ವಾನುಭವದಲ್ಲಿ ಆಗಿ ಬರದೆ ಅವರಿಗೆ ತೃಪ್ತಿ ಇರುತ್ತಿರಲಿಲ್ಲ.

ಗಾಂಧೀಜಿ ಆದರ್ಶ, ಸಬರಮತಿ ಆಶ್ರಮ ವಾಸ,  ರಾಮಕೃಷ್ಣ ಪರಮಹಂಸರಲ್ಲಿ ಪೂಜ್ಯಭಾವ ಇವೆಲ್ಲ ಕಾರಂತರಿಗೆ ದೇವರನ್ನು ಕುರಿತ ವಿಷಯದಲ್ಲಿ ಆಸಕ್ತಿ ಹುಟ್ಟಿಸಿತು.  ಈ ನಿಟ್ಟಿನಲ್ಲಿ ಧ್ಯಾನ, ಭಜನೆ, ನಿರ್ಜನ ಮಸಣ ಮತ್ತು ಅರಣ್ಯಗಳಲ್ಲಿ ಏಕಾಂತ, ದೇಹದಂಡನೆ, ಆಚಾರ ಇವೆಲ್ಲವನ್ನೂ ದೇವರ ಅರಸುವಿಕೆಯಲ್ಲಿ ಅವರು ಶ್ರದ್ಧಾಪೂರ್ಣವಾಗಿಯೇ ಕೈಗೊಂಡರು.  ಈ ಹಂತದಲ್ಲಿ ಅವರು ಕಂಡುಕೊಂಡ ಸತ್ಯವೆಂದರೆ:  “ನಾನು ಎಷ್ಟೂ ಚಿಂತಿಸಲಿ, ಹೇಗೂ ಚಿಂತಿಸಲಿ – ನನ್ನ ದೇವರು ನನ್ನ ಮಿತಿಯನ್ನು, ನನ್ನ ಜೀವನದ ಅನುಭವಗಳ ಮಿತಿಯನ್ನು ತೋರಿಸಿಕೊಡುತ್ತಿತ್ತು.  ದೇವರ ಚೆಲುವು, ದೊಡ್ಡಸ್ತಿಕೆ, ಉದಾರಗುಣಗಳು ನಮ್ಮ ಅನುಭವಗಳ ಮಿತಿಯನ್ನು ದಾಟಲಾರವೆಂಬ ತಿಳಿವಿಗೆ ನಾನು ಬರಬೇಕಾಯಿತು.  ಇದರಿಂದ ನನಗೆ ಅನಿಸುವುದೆಂದರೆ, ಮಾನವನು ತಾನು ದೊಡ್ದವನಾಗದೆ ತನ್ನ ದೇವರನ್ನು ದೊಡ್ಡದು ಮಾಡಲಾರ.  ನಾವು ನಮ್ಮ ಜೀವನವನ್ನು ಬೆಳೆಸಿದರೆ ಮಾತ್ರ ನಮ್ಮ ದೇವರೂ ಬೆಳೆಯಬಹುದು.”

ಕಾರಂತರ ಲೋಕದೃಷ್ಟಿ ಅಸಾಧಾರಣವಾದದ್ದು.  ಅವರ ನಿಷ್ಠೆ ಕೇವಲ ಒಂದು ಮನುಷ್ಯ ಸಮೂಹಕ್ಕಾಗಲಿ,  ಒಂದು ನಿರ್ದಿಷ್ಟ ಭೌಗೋಳಿಕ ಪರಿಸರಕ್ಕಾಗಲೀ ಸೀಮಿತವಾಗಿರಲಿಲ್ಲ.  ಇಡೀ ಬ್ರಹ್ಮಾಂಡವನ್ನು ಒಳಗೂಳ್ಳುವ ಉದಾರವಾದ ಮನಸ್ಸು ಕಾರಂತರದ್ದು.  “ಈ ಬ್ರಹ್ಮಾಂಡದಲ್ಲಿ ಅಸಂಖ್ಯ ನಕ್ಷತ್ರಗಳೂ, ಗ್ರಹಗಳೂ ಇವೆ.  ಭೂಮಂಡಲ ಈ ಅಗಾಧವಾದ ಬ್ರಹ್ಮಾಂಡದ ಒಂದು ಚಿಕ್ಕ ಭಾಗ ಅಷ್ಟೆ.  ಈ ಭೂಮಂಡಲದಲ್ಲಾದರೂ ಅಸಂಖ್ಯ ಜೀವಿಗಳಿದ್ದಾವೆ.  ಈ ಜೀವ ಸಂಕುಲದಲ್ಲಿ ಮನುಷ್ಯ ಕುಲ ಒಂದು ಚಿಕ್ಕ ಗುಂಪು.  ಈ ಮನುಷ್ಯ ಕುಲದಲ್ಲಿ ಹಲವು ರೀತಿಯ ಮನುಷ್ಯರಿದ್ದಾರೆ.  ಆದ್ದರಿಂದ ಯಾವುದೇ ಮನುಷ್ಯನು ತಾನೇ ಶ್ರೇಷ್ಠ, ಮೇಲು ಎಂದು ಗರ್ವ ಪಟ್ಟುಕೊಳ್ಳುವ ಹಾಗಿಲ್ಲ.  ಅವನು ಇತರ ಎಲ್ಲಾ ಮನುಷ್ಯರೊಂದಿಗಷ್ಟೇ ಅಲ್ಲ, ಇಡೀ ಜೀವ ಸಂಕುಲದೊಡನೆ ಈ ಬ್ರಹ್ಮಾಂಡದಲ್ಲಿ ಬಾಳ್ವೆ ನಡೆಸಬೇಕು.  ಕೇವಲ ಒಂದು ಜೀವ ಘಟಕವಾದ ಮನುಷ್ಯ ತನ್ನನು ಇಡೀ ಬ್ರಹ್ಮಾಂಡದೊಂದಿಗೆ ಸಮೀಕರಿಸಿ ನೋಡಿದಾಗ ಮಾತ್ರ ಆತ ತನ್ನ ಮಿತಿಯನ್ನು ಅರಿತುಕೊಳ್ಳುತ್ತಾನೆ.  ತಾನು ಬದುಕಿಗೆ ನೀಡುವುದಕ್ಕಿಂತ ಬದುಕು ತನಗೆ ನೀಡಿದ್ದು ಹೆಚ್ಚು ಎಂದು ತಿಳಿದುಕೊಳ್ಳುತ್ತಾನೆ.  ಇದರಿಂದ ಅವನಲ್ಲಿ ಕೀಳರಿಮೆ ಮೂಡಬೇಕಿಲ್ಲ; ವಿನೀತಭಾವ ಬೆಳೆಯಬೇಕು.  ಎಲ್ಲದರ ಬಗ್ಗೆ ಕುತೂಹಲ ಹುಟ್ಟಬೇಕು.  ಎಲ್ಲವನ್ನೂ ತಿಳಿಯುವಲ್ಲಿ, ಹಂಚಿಕೊಳ್ಳುವಲ್ಲಿ, ಬದುಕನ್ನು ಮತ್ತಷ್ಟು ಸುಂದರ, ಸಮೃದ್ಧಗೊಳಿಸುವಲ್ಲಿ ಸಾರ್ಥಕ್ಯ ಪಡೆಯಬೇಕು.”  ಇದು ಒಟ್ಟಾರೆ ಕಾರಂತರ ಜೀವನ ದೃಷ್ಟಿಯಾಗಿದೆ.

ಒಬ್ಬ ಸಾಹಿತಿಯ ಹೊಣೆ ಸಾಮಾನ್ಯ ಜನತೆಯ ಹೊಣೆಗಿಂತಲೂ  ಹೆಚ್ಚಿನದೆಂದು ಭಾವಿಸುವ ಕಾರಂತರು, ಬರಹಗಾರ ತನ್ನ ಜನಗಳ ಸಲುವಾಗಿ ಶ್ರಮಿಸಬೇಕು.  ಅವರ ಬದುಕಿನ ಮೂಕ ಜೀವನಕ್ಕೆ ನಾಲಿಗೆಯಾಗಬೇಕು, ಅವರ ತಿಳಿವಿನ ಅಂಧಕಾರಕ್ಕೆ ಆತ ಬೆಳಕಾಗಬೇಕು ಮತ್ತು ಅವರ ಜೀವನದ ಚಿತ್ತಭಿತ್ತಿಯಾಗಬೇಕು ಎನ್ನುತ್ತಿದ್ದರು.  ಕಾರಂತರ ಯಾವುದೇ ಬರಹವೂ ಈ ಮೂಲ ತತ್ವಕ್ಕೆ ಹೊರತಾಗಿಲ್ಲ.  ಈ ಎಲ್ಲಕ್ಕೂ ಮಿಗಿಲಾದದ್ದು, ಸಾಧ್ಯವಿದ್ದಷ್ಟನ್ನು ಅನುಭವಿಸಿ ತಿಳಿದುಕೊಳ್ಳಬೇಕು.  ಇತರರಿಗೆ ತಿಳಿಸಬೇಕು ಎಂಬುದು ಅವರ ಮನೋಧರ್ಮವಾಗಿತ್ತು.  ಈ ಹಾದಿಯಲ್ಲಿ ಯಾವುದೇ ಒಣ ತ್ಯಾಜ್ಯ ಮನೋಭಾವಗಳೂ ಅವರಲ್ಲಿ ಸುಳಿಯಲಿಲ್ಲ.  ‘ಬಾಳು ನನಗೆ ಮುಖ್ಯ’ ಎನ್ನುತ್ತಿದ್ದ ಅವರು, ನಿಸರ್ಗದಿಂದ ಪಡೆದ ಈ ದೊಡ್ಡ ವರವನ್ನು, ಅನನ್ಯವಾದ ಅವಕಾಶವನ್ನು ಸದುಪಯೋಗಿಸಿಕೊಂಡು ಚೆನ್ನಾಗಿ ಬಾಳಬೇಕು, ಸಾಧ್ಯವಾದ ಮಟ್ಟಿಗಿನ ಪೂರ್ಣತೆಯನ್ನು ತಮ್ಮದಾಗಿಸಿಕೊಳ್ಳಬೇಕು ಎಂಬ ನಿಲುವನ್ನು ಪ್ರತಿಪಾದಿಸಿದವರು.  ತಮ್ಮ “ಬಾಳ್ವೆಯೇ ಬೆಳಕು” ಪ್ರಬಂಧದಲ್ಲಿ ಅವರು ಈ ಆದರ್ಶವನ್ನು ಸ್ಪಷ್ಟವಾಗಿ ಹೇಳಿದ್ದಾರೆ.

ಕಾರಂತರು ಆದರ್ಶವಾದಿಗಳಾಗಿ ಇರುವಷ್ಟೇ ವಾಸ್ತವಾವಾದಿಗಳೂ ಆಗಿದ್ದರು.  ವಿಕಾಸದ ಆದರ್ಶ ಇಡೀ ಒಂದು ಸಮುದಾಯದ ದೃಷ್ಟಿಯಿಂದ ದೂರದ ಕನಸಾಗಿ ಕಂಡರೂ  ವೈಯಕ್ತಿಕ ಮಟ್ಟದಲ್ಲಿ ಅದು ಅಸಾಧ್ಯವಲ್ಲ ಎನ್ನುವುದು ಅವರ ಕಾದಂಬರಿಗಳು ತೋರಿಸಿಕೊಡುತ್ತವೆ.  ಅಂತೆಯೇ ಈ ದೃಷ್ಟಿ ಒಟ್ಟು ಕಾದಂಬರಿಯ ಆಶಯದಲ್ಲಿ, ಅಲ್ಲಿನ ಕೆಲವೊಂದು ಪಾತ್ರಗಳ ಶೀಲದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತವೆ ಮತ್ತು ಅವರ ಒಲವು ಎತ್ತ ಎನ್ನುವುದನ್ನೂ ಸ್ಪುಟವಾಗಿಸುತ್ತವೆ.  ಸುತ್ತಲಿನ ಸಾಮಾಜಿಕ ಜೀವನದಲ್ಲಿ, ರಾಜಕೀಯ ವಿದ್ಯಮಾನಗಳಲ್ಲಿ, ಧಾರ್ಮಿಕ ಜೀವನಕ್ಕೆ ಸಂಬಂಧಿಸಿದ ನಿಷ್ಠೆ ನಂಬಿಕೆಗಳಲ್ಲಿ ಯಾವ ಯಾವುದೆಲ್ಲ ಬದುಕನ್ನು ಹದಗೆಡಿಸಬಲ್ಲದೋ ಅದರ ವಿವಿಧ ಮುಖಗಳನ್ನು ಮಾತ್ರ ಅವರ ವಾಸ್ತವದೃಷ್ಟಿ ಎತ್ತಿ ತೋರಿಸುತ್ತದೆ.  ಅಷ್ಟು ಮಾತ್ರವನ್ನು ಅವರು ಮಾಡಿದ್ದರೆ ಅವರ ನೋಟ ನಿರಾಶೆಯದಾಗುತ್ತಿತ್ತು.  ಇವುಗಳಿಗೆ ಇದಿರಾಗಿ ಜೀವನವನ್ನು ಒಳ್ಳೆಯದಾಗಿಸಬಲ್ಲ ಅಂಶಗಳನ್ನೂ ಕೆಲವೊಂದು ಪಾತ್ರಗಳ ಮೂಲಕ ಸೂಚಿಸುತ್ತಾರೆ.  ಈ ಅಂಶಗಳೆಂದರೆ ಅವಿಶ್ರಾಂತ ದುಡಿಮೆ, ಸಂಕಲ್ಪ ಶುದ್ಧಿ, ಪ್ರಾಮಾಣಿಕ ಉದ್ದೇಶ, ನಿಷ್ಠೆ, ಎಂಥ ಬಡತನವೂ ಕೆಡಿಸಲಾಗದ ಹೃದಯದ ಒಲುಮೆ, ಚೆಲುವಾದದ್ದೆಲ್ಲದರ ಬಗೆಯಲ್ಲಿ ಗೌರವ, ಅದನ್ನು ಸವಿಯಬಲ್ಲ ಮನಸ್ಸಿನ ಪರಿಪಾಕ, ಬದುಕನ್ನು ಸಂಮೃದ್ಧವಾಗಿಸಿ, ಸಂತೋಷಕೊಡಬಲ್ಲ ಪ್ರತಿಯೊಂದರಲ್ಲಿಯೂ ಆಸಕ್ತಿ ಇವೇ ಮುಂತಾದ್ದವನ್ನು ಹೇಳಬಹುದು.  ಕಾರಂತರ ಈ ಆದರ್ಶ – ವಾಸ್ತವಗಳ ಸಮನ್ವಯ ದೃಷ್ಟಿಯೇ ಅವರ ಹಿರಿತನವೂ ಹೌದು.

ಕಾರಂತರ ಆತ್ಮ ಚರಿತ್ರೆಯಾದ ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಮತ್ತು ‘ಸ್ಮೃತಿ ಪಟಲದಿಂದ ಭಾಗ ೧, ೨, ೩  ಕಾರಂತರು ಬೆಳೆದು ಬಂದ ಕ್ರಮವನ್ನೂ ಅವರ ಆಶಯ, ಪ್ರೇರಣೆಗಳನ್ನೂ ಖಚಿತವಾಗಿ ನಿರೂಪಿಸುತ್ತವೆ.  ಕಾರಂತರ ಪ್ರವಾಸ ಗ್ರಂಥಗಳಾದ ‘ಅಬೂನಿಂದ ಬರಾಮಕ್ಕೆ’, ‘ಅಪೂರ್ವ ಪಶ್ಚಿಮ’, ‘ಪೂರ್ವದಿಂದ ಅತ್ಯಪೂರ್ವಕ್ಕೆ’ ಮುಂತಾದ ಕೃತಿಗಳಲ್ಲಿ ನಮಗೆ ಒದಗುವ ಮಾಹಿತಿ, ಹುಟ್ಟಿಸುವ ಕುತೂಹಲ ವಿಶಿಷ್ಟವಾದದ್ದು.  ಒಂದು ಪ್ರದೇಶದ ಚಾರಿತ್ರಿಕ, ಭೌಗೋಳಿಕ, ಸಾಂಸ್ಕೃತಿಕ ವಿವರಗಳು, ಅಲ್ಲಿನ ಸಸ್ಯ, ಪ್ರಾಣಿಜಗತ್ತು, ಜನಜೀವನ ಯಾವುದನ್ನೂ ಕಾರಂತರ ಕಣ್ಣುಗಳು  ತಪ್ಪಿಸಿಕೊಳ್ಳುವುದಿಲ್ಲ.

‘ಗ್ನಾನ’, ‘ದೇವದೂತರು’ ಮೊದಲಾದ ಕೃತಿಗಳಲ್ಲಿ ಧರ್ಮದ ಹೆಸರಿನಲ್ಲಿ ನಡೆಯುವ ಶೋಷಣೆಯ ಬಗ್ಗೆ ಅವರ ಕಿಡಿ ಕಿಡಿಯಾಗುವಿಕೆ ಇದ್ದರೂ ಅಷ್ಟಕ್ಕೇ ಅವರನ್ನು ಮೂರ್ತಿಭಂಜಕ ಪ್ರವೃತ್ತಿಯವರೆನ್ನಲಾಗುವುದಿಲ್ಲ.  ಅವರಿಗೆ ವ್ಯಂಗ್ಯವಷ್ಟೇ ಮೌಲ್ಯವಾಗುವುದಿಲ್ಲ.  ‘ಹಳ್ಳಿಯ ಹತ್ತು ಸಮಸ್ತರು’, ‘ಮೈಲಿಕಲ್ಲಿನೊಡನೆ ಮಾತುಕತೆ’ ಕೃತಿಗಳಲ್ಲಿ ಕಾರಂತರ ವ್ಯಕ್ತಿತ್ವದ ಮತ್ತೊಂದು ಪದರ ವ್ಯಕ್ತವಾಗುವುದನ್ನು ಕಂಡಾಗ ‘ಕಾರಂತರು ಇದೇ’ ಎಂದು ಹಣೆಪಟ್ಟಿ ಹಚ್ಚಲಾಗುವುದಿಲ್ಲ ಎಂಬುದನ್ನು ಗುರುತಿಸಬಹುದಾಗಿದೆ.  ದೇವರು ಧರ್ಮಶಾಸ್ತ್ರಗಳು ಕಾರಂತರ ಮನ ತುಂಬುವುದಿಲ್ಲವಾದರೂ, ಪರಂಪರೆ ನೀಡಿರುವ ಕೆಲವು ಮೌಲ್ಯಗಳು ಎಲ್ಲ ಕಷ್ಟ ಕಾರ್ಪಣ್ಯಗಳ ನಡುವೆಯೂ ಬದುಕುವ ಸ್ಥೈರ್ಯವನ್ನು ನೀಡುತ್ತ ಬಂದಿರುವುದನ್ನು ಕಾರಂತರು ಗಮನಿಸಿದ್ದಾರೆ.  ಅವರು ಸಂಪ್ರದಾಯವನ್ನು ಪೋಷಿಸುವುದಿಲ್ಲವಾದರೂ, ಹಬ್ಬ-ಹರಿದಿನಗಳು, ಜಾತ್ರೆ ಉತ್ಸವಗಳು, ದೇವಾಲಯಗಳು, ವಿವಿಧ ಬಗೆಯ ಶಿಲ್ಪಗಳು, ಚಿತ್ರಗಳು ಅವರಲ್ಲಿ ಉತ್ಸಾಹ ಹುಟ್ಟಿಸಿವೆ.  ಕಾರಂತರ ಕಾದಂಬರಿಗಳಲ್ಲಿ ಕಂಡು ಬರುವ ವೃದ್ಧೆಯರು ತೋರಿಸುವ ಘನತೆ, ಜೀವನ ಶ್ರದ್ಧೆಗಳು ಅಸಾಧಾರಣವಾದದ್ದು.  ಪರಂಪರಾಗತ ಮೌಲ್ಯಗಳನ್ನು ಕಾರಂತರು ಎತ್ತಿ ಹಿಡಿಯುವುದಿಲ್ಲವಾದರೂ, ಒಂದು ನಿಟ್ಟಿನಲ್ಲಿ ಜೀವನವನ್ನು ಸ್ಥೂಲಗೊಳಿಸುವ, ಮತ್ತೊಂದು ನಿಟ್ಟಿನಲ್ಲಿ ಜೀವನಕ್ಕೆ ಸ್ಥೈರ್ಯ ತುಂಬುವ ಈ ಜೀವನ ಪ್ರವಹಿನಿಯು ಅವರನ್ನು ಬೆರಗುಗೊಳಿಸಿದೆ.  ಮೂಕಜ್ಜಿ, ತಿಪ್ಪಕ್ಕರನ್ನು ಕುತೂಹಲದಿಂದ ನೋಡುವಂತೆಯೇ, ಜನ ಜೀವನ, ಸಂಸ್ಕೃತಿ, ನಂಬಿಕೆಗಳು ಪ್ರತಿಫಲವಾಗುವ ಪ್ರತಿಯೊಂದು ಆಚರಣೆಯೂ ಅವರಲ್ಲಿ ವಿಸ್ಮಯ ಹುಟ್ಟಿಸಿವೆ.  ಅಷ್ಟೆ ಅಲ್ಲ, ಅದರ ಮೂಲವನ್ನು ಹುಡುಕಲು ಅವರನ್ನು ಪ್ರೇರೇಪಿಸಿದೆ.

‘ಬೆಟ್ಟದ ಜೀವ’, ‘ಅಳಿದ ಮೇಲೆ’ ಕೃತಿಗಳಲ್ಲಿ ಕಾರಂತರೇ ಸ್ವತಃ ನಿರೂಪಕರಾಗಿ ನಿಂತ ದರ್ಶನವಾಗುತ್ತದೆ.  ಕಾರಂತರ ಬರವಣಿಗೆಗೂ, ಬದುಕಿನ ಬಗೆಗೆ ಅವರ ದೃಷ್ಟಿಗೂ ಇರುವ ಸಹಜ ಸಂಬಂಧ ಅವರ ಎಲ್ಲ ಕಾದಂಬರಿಗಳಲ್ಲೂ ಕಾಣಸಿಗುತ್ತದೆ.  ‘ಚೋಮನ ದುಡಿ’, ‘ಬೆಟ್ಟದ ಜೀವ’, ‘ಮರಳಿ ಮಣ್ಣಿಗೆ’, ‘ಅಳಿದ ಮೇಲೆ’, ‘ಕನ್ನಡಿಯಲ್ಲಿ ಕಂಡಾತ’, ‘ಮೈ ಮನಗಳ ಸುಳಿಯಲ್ಲಿ’, ‘ಕುಡಿಯರ ಕೂಸು’, ‘ಮೂಕಜ್ಜಿಯ ಕನಸುಗಳು’,  ಯಾವುದೇ ಭಾಷೆಯಲ್ಲಿನ ಉತ್ಕೃಷ್ಟ ಕಾದಂಬರಿಗಳು.  ‘ಸನ್ಯಾಸಿಯ ಬದುಕು’, ‘ಜಗದೋದ್ಧಾರನಾ’, ‘ಕಣ್ಣಿದ್ದೂ ಕಾಣರು’, ‘ಕೇವಲ ಮನುಷ್ಯರು’, ‘ಕನ್ಯಾ ಬಲಿ’, ಮತ್ತು ಹಲವಾರು ನಾಟಕಗಳಲ್ಲಿ ಕಾರಂತರು ನಮ್ಮ ಸಮಾಜದ ಅನೇಕ ಹುಳುಕುಗಳನ್ನು ಎತ್ತಿ ತೋರಿಸಿದ್ದಾರೆ.  ‘ಔದಾರ್ಯದ ಉರುಳಲ್ಲಿ’, ‘ಗೊಂಡಾರಣ್ಯ’, ‘ಮುಗಿದ ಯುದ್ಧ’, ‘ಮೂಜನ್ಮ'ದಂತ ಕಾದಂಬರಿಗಳಲ್ಲಿ ರಾಜಕೀಯ ಪ್ರಮುಖ ವಸ್ತು.

ಕಡಲ ತೀರದ ಈ ಭಾರ್ಗವರನ್ನು ಅಲಂಕರಿಸಿರುವ ಪ್ರಶಸ್ತಿ ಗೌರವಗಳು ಅನೇಕ.  ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ಗೌರವ ಫೆಲೋಶಿಪ್, ಹಲವಾರು ವಿಶ್ವ ವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್, ಜಾನಪದ ನೃತ್ಯ ಕಲೆಗೆ ಮೀಸಲಾದ ಸ್ವೀಡಿಷ್ ಅಕಾಡೆಮಿಯ ಬಹುಮಾನ ಪದಕ, ‘ಮೂಕಜ್ಜಿಯ ಕನಸುಗಳು’ ಕಾದಂಬರಿಗೆ ‘ಭಾರತೀಯ ಜ್ಞಾನಪೀಠ ಪ್ರಶಸ್ತಿ, ತುಳಸಿ ಸಂಮಾನ್ ಪ್ರಶಸ್ತಿ, ‘ಮೈ ಮನಗಳ ಸುಳಿಯಲ್ಲಿ’ ಕೃತಿಗೆ ಪಂಪ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿ (ತುರ್ತು ಪರಿಸ್ಥಿತಿಗೆ ಪ್ರತಿಭಟನೆಯಾಗಿ ಹಿಂದಿರುಗಿಸಿದರು), ‘ಚೋಮನ ದುಡಿ’ ಚಲನಚಿತ್ರಕ್ಕೆ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ, ಯಕ್ಷಗಾನ ಪ್ರದರ್ಶನಗಳಿಗೆ ಜಪಾನಿನ ಡಾನ್ಸ್ ಕ್ರಿಟಿಕ್ಸ್ ಸೊಸೈಟಿ ಪ್ರಶಸ್ತಿ, ಇಂದಿರಾಗಾಂಧೀ ರಾಷ್ಟ್ರೀಯ ‘ವೃಕ್ಷ ಮಿತ್ರ’ ಪ್ರಶಸ್ತಿ ಮೊದಲಾದವು ಕಾರಂತರ ಬಹುಮುಖ ಸಾಧನೆ ಹಾಗೂ ಸಿದ್ಧಿಗಳಿಗೆ ಸಂದ ಗೌರವಗಳಾಗಿವೆ.

ಟೆಹರಾನಿನಲ್ಲಿ ಜರುಗಿದ ಯುನೆಸ್ಕೊ ಶಿಕ್ಷಣ ಸಮ್ಮೇಳನದಲ್ಲಿ ಕಾರಂತರು ಭಾರತದ ವಿಶೇಷ ಪ್ರತಿನಿಧಿಯಾಗಿ ಭಾಗವಹಿಸಿದರು.  ಕನ್ನಡ ಸಾಹಿತ್ಯ ಸಮ್ಮೇಳನ, ವಿಶ್ವ ಕನ್ನಡ ಸಮ್ಮೇಳನದ ಅಧ್ಯಕ್ಷತೆಯೂ ಸೇರಿದಂತೆ ಹಲವಾರು ಮಹತ್ವದ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಸಮ್ಮೇಳನಗಳ ಅಧ್ಯಕ್ಷಪೀಠಕ್ಕೆ  ಆಹ್ವಾನಿಸಲ್ಪಟ್ಟಿದ್ದರು.  ಯೂರೋಪ್, ಜಪಾನ್ ಗಳಲ್ಲಿ ಇವರ ಯಕ್ಷಗಾನ ಪ್ರದರ್ಶನಗಳು ಜನ ಮೆಚ್ಚುಗೆ ಗಳಿಸಿದ್ದವು.  ಅವರ ಕೃತಿಗಳು ಹಿಂದಿ, ತಮಿಳು, ಮಲಯಾಳಿ, ಗುಜರಾಥಿ, ಮರಾಠಿ, ತೆಲುಗು, ತುಳು, ಒರಿಯಾ, ಕೊಂಕಣಿ, ಮತ್ತು ಇಂಗ್ಲೀಷ್ ಭಾಷೆಗಳಿಗೆ ಅನುವಾದಗೊಂಡವು.

ಸ್ವತಃ ತಮ್ಮ ಬದುಕನ್ನು ‘ಸಾಧ್ಯವಾದ ಮಟ್ಟಿಗೆ ತ್ತೃಪ್ತಿಕರವಾಗಿಯೇ ನಡೆಸಿದ್ದೇನೆ’ ಎಂದು ಹೇಳುತ್ತಿದ್ದ ಕಾರಂತರಿಗೆ ತಮ್ಮ ಸುತ್ತ ಮುತ್ತಲಿನ ಪರಿಸರದಲ್ಲಿ ಇದನ್ನು ಕಾಣಲಾಗಲಿಲ್ಲ ಎಂಬ ಬೇಸರವಿತ್ತು ಮತ್ತು ಆ ಕುರಿತಾಗಿ ಹಲವೊಮ್ಮೆ ‘ಖಾರಂತರೂ’ ಆಗುತ್ತಿದ್ದರು.  ಅವರಿಗೆ ಸಂದ ಸನ್ಮಾನ ಸಮಾರಂಭ ಒಂದರಲ್ಲಿ “ನಾವೆಲ್ಲ ಶೀಲವನ್ನು ಮಾರಿಕೊಂಡು ಬದುಕುತ್ತಿದ್ದೇವೆ” ಎಂದು ನುಡಿದ ಅವರ ನುಡಿಯಲ್ಲಿ ಬಿರುಸಿಗಿಂತ ನೋವು ಕಾಣುತ್ತಿತ್ತು.  ಬದುಕಿನ ಎಲ್ಲ ವೈಪರೀತ್ಯಗಳಿಗೂ ನಮ್ಮ ನಿರಾಸಕ್ತ ಜೀವನವೇ ಕಾರಣ ಎಂಬ ಅವರ ಅನಿಸಿಕೆಯಲ್ಲಿ ಅತಿಶಯೋಕ್ತಿಯಿಲ್ಲ.  ಕಾರಂತರು ಬಯಸುತ್ತಿದ್ದ, ನಡೆಸಿದ ಕ್ರಿಯಾಸಕ್ತ ಜೀವನವೇ ನಮಗೆಲ್ಲ ದಾರಿದೀಪವಾಗಬೇಕು.  ಇಂತಹ ಅಪೂರ್ವ ಚಿಂತನಶೀಲ, ಧೀರ, ಧೀಮಂತ ಸಾಹಿತಿ ಡಾ. ಶಿವರಾಮ ಕಾರಂತರ ಚೇತನಕ್ಕೆ ಭಕ್ತಿಪೂರ್ವಕ ನಮನಗಳು.

ಮಾಹಿತಿ ಆಧಾರ: ಸಾಲು ದೀಪಗಳು,  ಅಗ್ರಪೂಜೆ


ಫೋಟೋ ತೆಗೆದವರು: ಮುಕುಂದ್.  ದೊರೆತದ್ದು: ವೈದೇಹಿ ಅವರ ಪ್ರಜಾವಾಣಿಯಲ್ಲಿನ ಪತ್ರಿಕಾ ಲೇಖನದಲ್ಲಿ

No comments:

Post a Comment