Translate in your Language

Friday, March 4, 2016

ತಾರಾ ಅವರ 45ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು

ಚಲನಚಿತ್ರರಂಗವೆಂಬ ತಾರೆಗಳ ತೋಟದಲ್ಲಿ ವಿಶಿಷ್ಟರಾದ ತಾರಾ ಅವರ ಹುಟ್ಟಿದ ದಿನ ಮಾರ್ಚ್ 4, 1971.  ಬಹಳ ವರ್ಷಗಳ ಕಾಲ ರಾಷ್ಟ್ರಮಟ್ಟದ ನಟನಾ ಪ್ರಶಸ್ತಿಗಳಲ್ಲಿ ಕನ್ನಡ ಚಿತ್ರರಂಗದ ಹೆಸರು ಮರೆತುಹೋಗಿದ್ದ ಸಮಯದಲ್ಲಿ, ತಾರಾ ಅವರು  ತಮ್ಮ ‘ಹಸೀನಾ’ ಚಿತ್ರದ ಅಭಿನಯದ ಮೂಲಕ ಅದನ್ನು ಕನ್ನಡಕ್ಕೆ  ಮತ್ತೊಮ್ಮೆ ತಂದರು.  
‘ಕ್ರಮ’, ‘ಕರಿಮಲೆಯ ಕಗ್ಗತ್ತಲು’, ‘ಕಾನೂರು ಹೆಗ್ಗಡತಿ’, ‘ಮುಂಜಾನೆಯ ಮಂಜು’, ‘ನಿನಗಾಗಿ’, ‘ಸಯನೈಡ್’, ‘ಈ ಬಂಧನ’  ಹೀಗೆ ಹಲವು ಚಲನಚಿತ್ರಗಳಲ್ಲಿ ರಾಜ್ಯ ಪ್ರಶಸ್ತಿ ಪಡೆದ ತಾರಾ ಕನ್ನಡ ನಾಡು ಕಂಡ ಅಮೂಲ್ಯ ಪ್ರತಿಭೆ.  ಅವರ ಮತದಾನ,  ಸಯನೈಡ್, ಭಾಗೀರಥಿ  ಅಂತ ಚಿತ್ರಗಳೂ ಅಷ್ಟೇ ಪ್ರಸಿದ್ಧ. 


ತಾರಾ ಅವರು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದು ತಮಿಳು ಚಿತ್ರರಂಗದ ಮೂಲಕ.  ನಂತರ ಕನ್ನಡಕ್ಕೆ ಬಂದು ಇಲ್ಲಿ ನಿರಂತರವಾಗಿ ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲ ಕನ್ನಡ ಚಲನಚಿತ್ರಗಳಲ್ಲಿ ಮನೆಮಾತಾಗಿದ್ದಾರೆ.  ಇಂದೂ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅಷ್ಟೊಂದು ವರ್ಷ ಚಿತ್ರರಂಗದಲ್ಲಿದ್ದರೂ ಅವರು ನಾಯಕಿಯಾಗಿ ನಟಿಸಿದ್ದು ವಿರಳ ಚಿತ್ರಗಳಲ್ಲಿ.  ಕನ್ನಡದ ಪ್ರತಿಷ್ಟಿತ ನಟರಾದ ವಿಷ್ಣುವರ್ಧನ್, ಅಂಬರೀಶ್, ಅನಂತನಾಗ್ ಅವರ ಕೂಡ ಅಲ್ಲಲ್ಲಿ ಕೆಲವು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರುವ ತಾರಾ ಹೆಚ್ಚಾಗಿ ಕಂಡದ್ದು ನಮ್ಮ ನಾಯಕರ ತಂಗಿಯ ಪಾತ್ರದಲ್ಲಿ. 

ತಾರಾ ಅವರು ನಿರ್ವಹಿಸಿದ ಪಾತ್ರಗಳಲ್ಲಿ ಅವರ ಪ್ರತಿಭೆ ಎಷ್ಟು ಸೊಗಸಿನದ್ದೆಂದರೆ ಆ ಚಿತ್ರಗಳಲ್ಲಿ ಪ್ರಧಾನ ಪಾತ್ರಗಳಲ್ಲಿರುತ್ತಿದ್ದ ನಟನಾಮಣಿಗಳ ಪೇವಲ ಭಾವನಾಶೂನ್ಯ ಬೊಂಬೆತನಗಳನ್ನು ನಿವಾಳಿಸುವಷ್ಟು.  ಕೆಲವು ಸಲ ಆ ನಾಯಕಿಯರನ್ನು ನೋಡಿದಾಗ ತಲೆ ಮೇಲೆ ಕುಟ್ಟಿ ನಮ್ಮ ‘ತಾರಾ’ ಅವರಂತೆ ಅಭಿನಯಿಸಲಿಕ್ಕೆ ನಿಮಗೆ ಏನು ಕಷ್ಟ ಅಂತ ಕೇಳುವಂತಾಗುತ್ತದೆ.  ಜೊತೆಗೆ ಆ ನಾಯಕಿಯರನ್ನು ಮೆರೆಸಿ ನಮ್ಮ ಕನ್ನಡದ ಹುಡುಗಿಯರನ್ನು ಸಣ್ಣ ಪಾತ್ರಗಳಿಗೆ ದೂಡುವ ನಮ್ಮ ಕನ್ನಡದ ಪ್ರತಿಷ್ಟಿತ ದೊರೆಗಳನ್ನು ಕೂಡ ‘ಇದನ್ನೆಲ್ಲಾ ಮಾಡ್ತೀರಲ್ಲಾ ನಿಮಗೆ.....’ ಎಂದು ಕೇಳುವಂತಾಗುತ್ತದೆ.  ಆದರೆ ಅದೆಲ್ಲ ಅನಿಸುತ್ತದೆ.  ನಾವು ಕನ್ನಡಿಗರಲ್ಲವೇ ‘ಮರ್ಯಾದಸ್ತರು, ಶಾಂತಿಪ್ರಿಯರು’  ನಾವು ಹಾಗೆಲ್ಲಾ ಸೊಲ್ಲು ಹಾಕುವುದಿಲ್ಲ!  ಈಗಿನ ದಿನದಲ್ಲಿ ಈ ತಾಪತ್ರಯ ಹೆಚ್ಚಿಲ್ಲ.  ಕಾರಣ ಇಷ್ಟೇ.  ಈಗಿನ ನಟಿಯರಲ್ಲಿ ವೆತ್ಯಾಸ ಇರೋದು ತುಂಬಾ ಕಡಿಮೆ. ಅವರು ಬೆಂಗಳೂರಿನವರೋ ಅಲ್ಲವೋ ಅಂತ!  ಯಾರಿಗೂ ಕನ್ನಡ ಸರಿಯಾಗಿ ಬರೋಲ್ಲ. 

ಅದೇನೇ ಇರಲಿ.  ತಾವು ಮಾಡುವ ಕೆಲಸ ಚಿಕ್ಕದಿರಲಿ, ದೊಡ್ಡದಿರಲಿ.  ತಾವು ಮಾಡಿದ ಕೆಲಸವನ್ನು ಶ್ರದ್ಧೆಯಿಂದ ಮಾಡಿದರೆ  ಅದು ನೀಡುವ ಪ್ರತಿಫಲ ಎಷ್ಟು ದೊಡ್ಡದೆಂದು ನಮ್ಮ ತಾರಾ ಅವರು ತಮ್ಮ ಸಾಧನೆಗಳ ಮೂಲಕ ಲೋಕಕ್ಕೆ ತೋರಿಸಿಕೊಟ್ಟಿದ್ದಾರೆ.  ಸಿದ್ಧಲಿಂಗಯ್ಯ, ಕೆ. ಬಾಲಚಂದರ್, ಗಿರೀಶ್ ಕಾಸರವಳ್ಳಿ, ಗಿರೀಶ್ ಕಾರ್ನಾಡ್, ಶೇಷಾದ್ರಿ, ಮಣಿರತ್ನಂ, ನಾಗತಿಹಳ್ಳಿ, ದಿನೇಶ್ ಬಾಬು   ಅಂಥಹ ವಿಭಿನ್ನ ನೆಲೆಯ ಶ್ರೇಷ್ಠರ ನಿರ್ದೇಶನಗಳಲ್ಲಿ ಕೆಲಸಮಾಡಿದ್ದಾರೆ.  ಹಲವು ರೀತಿಯ ಸಾರ್ವಜನಿಕ ಕಾರ್ಯಗಳಲ್ಲಿ ಆಸಕ್ತರಾಗಿರುವ ತಾರಾ ಅವರು ರಾಜಕೀಯವಲಯದಲ್ಲೂ ತಮ್ಮನ್ನು ಗುರುತಿಸಿಕೊಂಡಿದ್ದಾರೆ.  ಅವರು ವಿಧಾನ ಪರಿಷತ್ ಸದಸ್ಯರೂ ಹೌದು.  ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿದ್ದಾಗ ‘ಬೆಳ್ಳಿ ಹೆಜ್ಜೆ’, ‘ವಾರ್ಷಿಕ ಚಲನಚಿತ್ರೋತ್ಸವ’ಗಳ ಮೂಲಕ ತಮ್ಮ ಕಾರ್ಯಗಳನ್ನು ಶ್ರದ್ಧೆಯಿಂದ ಮಾಡಿದ್ದಾರೆ. 


ಚಲನಚಿತ್ರ ತಂತ್ರಜ್ಞ ವೇಣು ಅವರನ್ನು ವರಿಸಿರುವ ತಾರಾ ಅವರಿಗೆ ಒಂದು ಮಗುವಿದೆ.  ಹಲವು ವರ್ಷಗಳ ನಿರಂತರ ಪರಿಶ್ರಮದಿಂದ ಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತಾ ಬಂದಿರುವ ತಾರಾ ಅವರ ಸೇವೆಗೆ ಮುಂದೆ ಕೂಡಾ ಹೆಚ್ಚಿನ ಮನ್ನಣೆಗಳು ಸಿಗಲಿ.  ಅವರ ಬದುಕು ಸುಂದರವಾಗಿರಲಿ ಎಂದು ಹುಟ್ಟು ಹಬ್ಬದ ಶುಭಾಶಯ ಕೋರೋಣ.

No comments:

Post a Comment