Translate in your Language

Monday, May 30, 2016

ರವಿಚಂದ್ರನ್ ಅವರ 56ನೇ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು




ನಮ್ಮ ವಿ. ರವಿಚಂದ್ರನ್ ಹುಟ್ಟಿದ ಹಬ್ಬ.  ಅವರು ಹುಟ್ಟಿದ್ದು ಮೇ 30, 1961 ರಲ್ಲಿ.  ಹೆಸರಾಂತ ಚಲನಚಿತ್ರಗಳ ನಿರ್ಮಾಪಕ, ವಿತರಕರಾದ ಎನ್.  ವೀರಸ್ವಾಮಿ ಅವರ ಪುತ್ರ ರವಿಚಂದ್ರನ್.    ಪ್ರಾರಂಭದಲ್ಲಿ ಅಲ್ಲೊಂದು ಇಲ್ಲೊಂದು ಪಾತ್ರಗಳನ್ನು ಮಾಡುತ್ತಾ ತಾನು ಭಾಗವಹಿಸಿದ್ದ ಒಂದೊಂದು ಚಿತ್ರದಲ್ಲೂ ಇನಿತಿನಿತು ಕಲಿಯುತ್ತ ಬಂದ ಈ ಹುಡುಗ ‘ಗ್ರೀಸ್ 2’ ಎಂಬಂತಹ ಚಿತ್ರವನ್ನು ನೆನಪಿಸುವ ‘ಪ್ರೇಮಲೋಕ’ ಎಂಬ ಚಿತ್ರವನ್ನು ಮಾಡಿ ಮನೆಮಾತಾಗಿ ಬಿಟ್ಟರು.  ಆತನ ಯಶಸ್ಸಿನ ಹಾದಿ ‘ಅಂಜದ ಗಂಡು’, ‘ರಣಧೀರ’ ಮುಂತಾದ ಯಶಸ್ವೀ ಚಿತ್ರಗಳನ್ನು ತಂದಿತು.  ರವಿಚಂದ್ರನ್ ತಮಗೆ ಅಭಿಮಾನಿಗಳು ನೀಡಿರುವ ಬಿರುದಿನಂತೆ ಒಬ್ಬ ಮಹಾನ್ ‘ಕನಸುಗಾರ’. ಕ್ರೇಜಿ ಸ್ಟಾರ್

ಹಿರಿಯ ನಟರೊಂದಿಗೆ ರವಿಚಂದ್ರನ್
ರವಿಚಂದ್ರನ್ ಚಿತ್ರಗಳನ್ನು ನೋಡಿದಾಗಲೆಲ್ಲಾ ಏನೋ ಒಂದು ಅಪೂರ್ಣತೆಯಿದೆ ಎಂದು ಅನಿಸುವುದರ ಜೊತೆಗೆ ಇಲ್ಲೂ ಏನೋ ಹೊಸತು ಕಾಣುತ್ತಿದೆ, ಒಂದಷ್ಟು ವೈಭವೀಕರಣ ಇದೆ, ಅರ್ಥ ತಾತ್ಪರ್ಯಗಳ ಗೋಜಿಗೆ ಹೋಗದಿದ್ದರೆ ಒಂದಷ್ಟು ಗುನುಗೋಣ ಎನಿಸುವ ಹಾಡುಗಳಿವೆ, ನಮ್ಮ ಸೆನ್ಸಾರ್ ಮಂಡಳಿಯವರು ಕಾರ್ಯ ನಿರ್ವಹಿಸುತ್ತಿದ್ದಾರೆಯೇ ಎಂದು ಕೆಲವೊಮ್ಮೆ ಸಂದೇಹ ಉಕ್ಕಿಸುವ ಸನ್ನಿವೇಶಗಳಿವೆ ಇವೆಲ್ಲಾ ನೆನಪಾಗುತ್ತೆ.  ಇವರು  ಪೆದ್ದು ಪೆದ್ದಾಗಿ ನಟಿಸಿದ ‘ರಾಮಾಚಾರಿ’, ಒಂದಷ್ಟು ತಾಳ್ಮೆ ಗಾಂಭೀರ್ಯತೆಯಿಂದ ನಟಿಸಿದ್ದ ‘ಕನಸುಗಾರ’, ‘ಯಾರೇ ನೀನು ಚೆಲುವೆ’’ ಅಂತಹ ಚಿತ್ರಗಳು,  ‘ಪ್ರೇಮ ಲೋಕ’ದಲ್ಲಿ ಆತ ಕೆಲವೊಂದು ಪ್ರಮುಖ ನಟ ನಟಿಯರನ್ನು ಬೆರೆಸಿ ಸೃಷ್ಟಿಸಿದ ಕೆಲವು ಹಾಡುಗಳು ಇತ್ಯಾದಿಗಳು ಆತನನ್ನು ಮೆಚ್ಚುವಂತೆ ಕೂಡಾ ಮಾಡುತ್ತೆ.

ರವಿಚಂದ್ರನ್ ಎಷ್ಟು ಸಿನಿಮಾದಲ್ಲಿ ಗೆದ್ದಿದ್ದಾರೋ ಅದಕ್ಕೆ ಮಿಗಿಲಾದ ಚಿತ್ರಗಳು ಸೋತಿವೆ ಎಂಬುದು ಕೂಡಾ ನಿಜ.  ಆತ ನಿರ್ಮಿಸಿದ ಪರಭಾಷಾ ಸರಕುಗಳು ಜಯಗಳಿಸುವ ಹಾಗೆ ಆತನ ‘ಏಕಾಂಗಿ’ಯಂತಹ ಹೊಸ ಪ್ರಯತ್ನಗಳು ಮನಸೆಳೆಯಲಿಲ್ಲ.  ಇಷ್ಟಾದರೂ ಕಳೆದ ಇಪ್ಪತ್ತೈದಕ್ಕೂ ಹೆಚ್ಚು ವರ್ಷಗಳ ಅವಧಿಯಲ್ಲಿ ಚಿತ್ರರಂಗದಲ್ಲಿದ್ದು ಇಂದೂ ಕೂಡಾ ಆತ ಸೋಲು ಗೆಲುವುಗಳ ಪರಿಧಿಯಾಚೆಗೆ ಚಿತ್ರರಂಗದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಸಾಮಾನ್ಯವಾದ ಮಾತೇನಲ್ಲ.

ಹಂಸಲೇಖ ಅಂತಹ ಮಹಾನ್ ಪ್ರತಿಭೆಯನ್ನು ಕನ್ನಡ ಚಿತ್ರರಂಗಕ್ಕೆ ದೊರಕಿಸಿಕೊಟ್ಟದ್ದು, ಜ್ಯೂಲಿ ಚಾವ್ಲಾಳನ್ನು ಮೊದಲು ಪ್ರಸಿದ್ಧಿ ಪಡಿಸಿದ್ದು, ಖುಷ್ಬೂಗೆ ಅಮೋಘ ಪ್ರಸಿದ್ಧಿ ತಂದಿದ್ದು, ಶಿಲ್ಪಾ ಶೆಟ್ಟಿಗೆ ಕೂಡಾ  ಸುಂದರವಾಗಿ ಚಿತ್ರಗಳಲ್ಲಿ ಕಾಣಬಲ್ಲಳು  ಎಂದು ತೋರಿದ್ದು ಇವೆಲ್ಲಾ ರವಿಯ ಗರಿಮೆಗಳೇ.  ಇಷ್ಟಾಗಿಯೂ ಈತ ತನ್ನ ಚಿತ್ರಗಳಲ್ಲಿ ಯಾವುದೋ ವೈಭವೀಕರಣ ತುರುಕಿ ಯಶಸ್ಸನ್ನು ಹುಡುಕುತ್ತಿರುವುದರ ಜೊತೆ ಜೊತೆಗೆ ಸೃಜನಶೀಲತೆಯಲ್ಲಿ ಮತ್ತಷ್ಟು ಪ್ರಯತ್ನಿಸಬಹುದಿತ್ತು ಎಂದು ಅನಿಸದಿರದು. 

ಈ ಹಿಂದೆ ತಮ್ಮ ತಮ್ಮನನ್ನು ಚಿತ್ರರಂಗಕ್ಕೆ ತರಲು ಯತ್ನಿಸಿದ್ದ ರವಿಚಂದ್ರನ್ ಇದೀಗ ತಮ್ಮ ಪುತ್ರರನ್ನು ಚಿತ್ರರಂಗಕ್ಕೆ ತರುವ ಯತ್ನದಲ್ಲಿದ್ದಾರೆ.  ತಮ್ಮ ಮಕ್ಕಳನ್ನು ಮುಂದೆ ತಂದು ತಾವು ಮುಂಬರುವ ದಿನಗಳಲ್ಲಿ ಹಿಂದೆ ಸರಿಯುವ ಮಾತನ್ನು ಕೂಡಾ ಇತ್ತೀಚೆಗೆ ಹೇಳಿದ್ದಾರೆ.


ಈ ಉತ್ಸಾಹೀ ರವಿಚಂದ್ರನ್ ಅವರಿಗೆ ಹುಟ್ಟು ಹಬ್ಬದ ಶುಭ ಕೋರಿ ಅವರಿಂದ ಉತ್ತಮ ಚಿತ್ರಗಳು ಮೂಡಲಿ ಎಂದು ಹಾರೈಸೋಣ.

No comments:

Post a Comment